ಹುಬ್ಬಳ್ಳಿ.: ಹುಬ್ಬಳ್ಳಿ ಧಾರವಾಡ ನಗರದ ರಸ್ತೆಗಳ ದುರಸ್ತಿ, ಡಾಂಬರೀಕರಣ ಹಾಗೂ ಒಳಚರಂಡಿ ನಿರ್ಮಾಣಕ್ಕೆ 240 ಕೋಟಿ ಅನುದಾನ ಬೇಡಿಕೆಯನ್ನು ಪಾಲಿಕೆಯಿಂದ ನೀಡಲಾಗಿದೆ. ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.
ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಅವರು, ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಆಮೆಗತಿ ಸಾಗುತಿದೆ. ಇಂದು ಕಾಮಗಾರಿ ಸ್ಥಳಗಳಿಗೆ ಭೇಟಿ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗದಾರಿಗೆ ಹಗಲು ರಾತ್ರಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ. ನಗರದ ತೋಳನಕೆರೆ ಅಭಿವೃದ್ಧಿ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇನ್ನು ಒಂದು ತಿಂಗಳೊಳಗಾಗಿ ಕೆಲಸವನ್ನು ಪೂರ್ಣಗೊಳಿಸುಲಾಗುವುದು. ತೋಳನ ಕೆರೆಯಲ್ಲಿನ ಜೊಂಡನ್ನು ತೆಗೆದು ಶುದ್ಧೀಕರಣ ಮಾಡಿ ಕೆರೆಯ ಸುತ್ತಲೂ ಸಸಿಗಳನ್ನು ನೆಡುವಂತೆ ಸೂಚಿಸಿದ್ದೇನೆ. ರೇಣುಕಾ ನಗರದ ಸ್ಮಾರ್ಟ್ ರಸ್ತೆ ಪ್ಯಾಕೇಜ್ ಡಾಂಬರೀಕರಣ ಆಗಸ್ಟ್ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದೆ. ಬೆಂಗೇರಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಯು ಸಹ ಮುಕ್ತಾಯ ಹಂತದಲ್ಲಿದೆ. ಜನತಾ ಬಜಾರ ಮಾರುಕಟ್ಟೆ ಕಾಮಗಾರಿಯ ಕೆಲಸ ಪ್ರಗತಿಯಲ್ಲಿದ್ದು ಡಿಸೆಂಬರ್ ತಿಂಗಳಿನೊಳಗಾಗಿ ಮುಗಿಸಿಕೊಡುವಂತೆ ಆದೇಶಿಸಲಾಗಿದೆ. ಗಣೇಶಪೇಟೆಯ ಹೊಸ ಮೀನು ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಸಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಿದೆ.
ಪಾಲಿಕೆ ಆಸ್ತಿ ಕರ ಹೆಚ್ಚಳವಾಗಿರುವ ಕುರಿತು ಮನವಿಗಳು ಬಂದಿದೆ. ಇದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮರುಪರಿಶೀಲನೆ ಮಾಡಲಾಗುವುದು. 140 ಕೋಟಿ ಮಹತ್ಮಾ ಗಾಂಧೀ ನಗರ ವಿಕಾಸ ಯೋಜನೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದ್ದು, ಶೀಘ್ರವಾಗಿ ಚಾಲನೆ ನೀಡಲಾಗುವುದು. ಕೋವಿಡ್ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರ ಕೊರತೆಯಿಂದ ಅಭಿವೃದ್ಧಿ ಕೆಲಸದಲ್ಲಿ ವಿಳಂಬವಾಗಿದೆ. ಪಾಲಿಕೆಯ ಬಾಕಿ ಇರುವ ಪಿಂಚಣಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.
ಅವಳಿ ನಗರದಲ್ಲಿ ರೈತರ ಮನವೊಲಿಸಿ ಅವರಿಂದ ಭೂಮಿ ಪಡೆದು ಬಡಾವಣೆ ನಿರ್ಮಿಸಿ ಸಾರ್ವಜನಿಕರಿಗೆ ನಿವೇಶನಗಳನ್ನು ಮಾಡಿ ಕೊಡುವ ಯೋಜನೆ ಇದೆ. ಮುಕ್ತಾಯ ಹಂತಕ್ಕೆ ಬಂದಿರುವ ಮಹಾತ್ಮ ಗಾಂಧಿ (ಗ್ಲಾಸ್ ಹೌಸ್) ಉದ್ಯಾನವನ, ಸ್ಮಾರ್ಟ್ ಸಿಟಿ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳನ್ನು ಮುಂದಿನ ತಿಂಗಳಲ್ಲಿ ಲೋಕಾರ್ಪಣೆ ಗೊಳಿಸಲಾಗುವುದು. 30 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣ, 150 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ ಪಾಟೀಲ, ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಕೆ.ಯು.ಡಿ.ಎಪ್.ಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀನಿವಾಸ,ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಇತರೆ ಸದಸ್ಯರು ಉಪಸ್ಥಿತರಿದ್ದರು.