ಹುಬ್ಬಳ್ಳಿ: ಕೋವಿಡ್ ಲಾಕ್ಡೌನ್ ನಡುವೆ ಹೋಟೆಲ್ ಉದ್ದಿಮೆ ನಷ್ಟ ಅನುಭವಿಸುತ್ತಿದೆ. ಹೋಟೆಲ್ಗಳು ಬಂದ್ ಇರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಆದ್ದರಿಂದ ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡುವಂತೆ ಹುಬ್ಬಳ್ಳಿ ಹೋಟೆಲ್ ಸಂಘದ ಸದಸ್ಯರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸದ್ಯ ಸ್ವೀಗಿ ಹಾಗೂ ಜೂಮ್ಯಾಟೋ ಸೇರಿದಂತೆ ಹಲವು ಪಾರ್ಸಲ್ ಸೇವೆಗಳಿಗೆ ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆ ವರೆಗೆ ಅವಕಾಶವಿದೆ. ಈ ಸಮಯವನ್ನು ರಾತ್ರಿ 8 ಗಂಟೆಯ ವರೆಗೆ ಹೆಚ್ಚಿಸಬೇಕು. ಬೆಳ್ಳಿಗೆ 6 ರಿಂದ 10 ರವರೆಗೆ ಸಾರ್ವಜನಿಕರು ಹೋಟೆಲ್ಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಸಂಘದ ಸದಸ್ಯರು ಸಚಿವರಲ್ಲಿ ಕೋರಿಕೊಂಡರು.
ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಪಾರ್ಸಲ್ ಸೇವೆ ಅವಕಾಶ ಮಾಡಿಕೊಡುವುದಾಗಿ ಹಾಗೂ ಲಾಕ್ ಡೌನ್ ನಿಯಮಗಳಲ್ಲಿ ಹೋಟೆಲ್ ಉದ್ದಿಮೆಗಳಿಗೆ ವಿನಾಯಿತಿ ನೀಡುವುದಾಗಿ ಭರವಸೆ ನೀಡದರು.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಹೋಟೆಲ್ ಸಂಘದ ಸದಸ್ಯರಾದ ರವಿ ಗಾಯತೋಂಡೆ, ಎ ಪಿ ಐತಾಳ್, ಸರ್ವೋತ್ತಮ ಶೆಟ್ಟಿ ಶ್ರೀನಿವಾಸ ಓಕೋಡ ಉಪಸ್ಥಿತರಿದ್ದರು.